ಯಶ್ ಅಭಿಮಾನಿಗಳ‌ ಸಾವು : ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ ಪರಿಹಾರ ಘೋಷಣೆ

ಯಶ್ ಅಭಿಮಾನಿಗಳ‌ ಸಾವು : ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ ಪರಿಹಾರ ಘೋಷಣೆ

 

ಬೆಂಗಳೂರು: ನಟ ಯಶ್​ ಜನ್ಮದಿನದಂದು ಅಭಿಮಾನಿಗಳ‌ ದಾರುಣ ಸಾವು ಪ್ರಕರಣ ಹಿನ್ನೆಲೆ ಇಂದು ಗದಗದ ಸೂರಣಗಿ ಗ್ರಾಮಕ್ಕೆ ಯಶ್ ಆಪ್ತರು ಭೇಟಿ ನೀಡಿ ಪರಿಹಾರ ವಿತರಿಸಿದ್ದಾರೆ. ಯಶ್ ಸ್ನೇಹಿತರಾದ ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿ ಬಳಗದ‌ ಅಧ್ಯಕ್ಷ ಮಂಜುನಾಥ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

ಬಳಿಕ ಮೃತ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ. ಮೃತಪಟ್ಟ ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಕುಟುಂಬಕ್ಕೆ ಪರಿಹಾರ ನೀಡಿದ್ದಾರೆ. ಇನ್ನು ಗಾಯಾಳುಗಳಿಗೂ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ದುರಂತ ಪ್ರಕರಣದಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಜನವರಿ 8 ರಂದು ನಟ ಯಶ್​ ಜನ್ಮದಿನ ಹಿನ್ನೆಲೆ ಅದರ ಹಿಂದಿನ ದಿನ ಅಭಿಮಾನಿಗಳು ಸೆಲೆಬ್ರೇಷನ್​​ಗಾಗಿ ಕಟೌಟ್​​ ನಿಲ್ಲಿಸುವಾಗ ನಡೆದ ವಿದ್ಯುತ್​​ ಅವಘಡದಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ನಡೆದ ಮರುದಿನವೇ ಅಂದರೆ ತಮ್ಮ ಜನ್ಮದಿನದಂದು ನಟ ಯಶ್​​ ಮೃತ ಯುವಕರ‌ ಕುಟುಂಬಸ್ಥರನ್ನು ಭೇಟಿ ಮಾಡಿ‌ ಸಾಂತ್ವನ ಹೇಳಿದ್ದರು.